ಭೀಮನ ಅಮಾವಾಸ್ಯ ಮಹತ್ವ:
ಆಷಾಡ ಮಾಸ ಮುಗಿದ ನಂತರ ಬರುವ ಅಮಾವಾಸ್ಯೆ ನೇ ಭೀಮನ ಅಮಾವಾಸ್ಯೆ – ಜೂಲೈ – ಆಗಸ್ಟ್ ನಲ್ಲಿ ಬರುತ್ತದೆ. ಭೀಮನ ಅಮಾವಾಸ್ಯ ಎಂದರೆ ಭೀಮನಷ್ಟೇ ಬಲವುಳ್ಳ ಗಂಡ ಸಿಗಲೆಂದು ಮಧುವೆ ಇಲ್ಲದ ಹೆಣ್ಣು ಮಕ್ಕಳು ಜೋಡಿ ದೀಪವನ್ನು ಇಟ್ಟು ಪೂಜೆ ಮಾಡುತ್ತಾರೆ.ಮದುವೆ ಯಾಗಿರುವವರು ಉತ್ತದ ಮಣ್ಣನ್ನು ತಂದು ಅದರಿಂದ ಮಣ್ಣಿನ ಗೊಂಬೆಯನ್ನು ಮಾಡಿ, ಅದನ್ನೇ ಗಂಡನೆಂಬ ಭಾವನೆ ತುಂಬಿ ಕೊಂಡು ಪೂಜೆಯನ್ನು ಮಾಡುತ್ತಾರೆ (ಪದ್ದತಿ ಇರುವವರು). ಇದು ಬ್ರಾಹಮಣರು ಜಾಸ್ತಿ ಪಾಲಿಸುವುದು. ಪದ್ದತಿ ಇಲ್ಲದವರು ಜೋಡಿ ದೀಪ ಇಟ್ಟು ಪೂಜೆ ಮಾಡಬಹುದು- ಹೀಗೆ ಮಾಡಿದರೆ ಒಳ್ಳೆಯದು, ಶ್ರೇಯಸ್ಸು.
ಭೀಮನ ಅಮವಾಸ್ಯೆ ಪೂಜೆಗೆ ಬೇಕಾಗುವ ಸಾಮಾನುಗಳು:
೧. ಜೋಡಿ ದೀಪಗಳು
೨. ಎಲೆ, ಅಡಿಕೆ, ದಕ್ಷಿಣೆ,ತೆಂಗಿನಕಾಯಿ, ಬಾಳೆ ಹಣ್ಣು, ಇತರೆ ಹಣ್ಣುಗಳು
೩. ದೀಪಕ್ಕೆ ತುಪ್ಪ ಹಾಕಿ ಹಚ್ಚ ಬೇಕು.
೪. ಕರ್ಪೂರ, ಊದಬತ್ತಿ, ತುಪ್ಪದ ಬತ್ತಿಗಳು.
೫. ಹೂವು, ಕಟ್ಟಿರುವುದು, ಹಾಗು ಬಿಡಿ ಹೂವು
೬. ಎರಡು ಎಳೆ ಗೆಜ್ಜೆ ವಸ್ತ್ರ.
೭. ಅಂಗದಾರ ಎರಡು ಎಳೆ – ಅರಿಶಿನ ಹಚ್ಚಿರಬೇಕು.
೮. ಅರಿಶಿನ, ಕುಂಕುಮ,ಅಕ್ಷತೆ,ವಿಬೂತಿ.
ಪೂಜೆ ಮಾಡುವ ವಿಧಾನ:
ಮುಂಜಾನೆ ಬೇಗೆನೆ ಎದ್ದು ಎಣ್ಣೆ ಸ್ನಾನ ಮಾಡಿ, ರೇಷ್ಮೆ ಬಟ್ಟೆ ಧರಿಸಿ, ಒಡವೆ, ಅಲಂಕಾರಗಳ್ಳನ್ನು ಮುಗಿಸಿ ಕೊಳ್ಳಬೇಕು. ಗಂಡನಿಗೆ ಎಣ್ಣೆ ಸ್ನಾನ, ರೇಷ್ಮೆ ಪಂಚೆ, ಶಲ್ಯ, ಶಿರ್ಟ್, ಒಡವೆ(ಇದ್ದಾರೆ, ಆದರೆ) ಎಲ್ಲವನ್ನು ಧರಿಸಿದ ಮೇಲೆ, ಅವರನ್ನು ಕುರ್ಚಿಯ ಮೇಲೆ ಕೂರಿಸಿ, ಅವರ ಕಾಲುಗಳ್ಳನ್ನು ಒಂದು ತಟ್ಟೆಯಲ್ಲಿ ಇಟ್ಟು ತೊಳೆದು, ಒರೆಸಿ, ಗಂಧ ಅಕ್ಷತೆ ಕುಂಕುಮ ಅರಿಸಿನ ದಿಂದ ಪೂಜಿಸಿ, ಹಣ್ಣು ಕಾಯಿ, ವೀಳೇದೆಲೆ ಅಡಿಕೆ, ದಕ್ಷಿಣೆ ಎಲ್ಲವನ್ನು ನೈವೇದ್ಯ ಮಾಡಿ, ಕರ್ಪೂರ, ಊದಿನಕಡ್ಡಿ, ಬೆಳಗಿ, ಗಂಡನ ಕಾಲಿಗೆ ನಮಸ್ಕಾರ ಮಾಡಿ (ನಮಸ್ಕಾರ ಮಾಡುವಾಗ ಪಾದದಲ್ಲಿ ಇರುವ ಕುಂಕುಮ ಹೆಂಡತಿಯ ಹಣೆಗೆ ಹತ್ತಿಕೊಳ್ಳಬೇಕು). ಮಾಂಗಲ್ಯ ನೆಲಕ್ಕೆ ಸೋಕಬಾರದು. ಹೀಗೆ ಆಶೀರ್ವಾದವನ್ನು ಪಡೆಯುತ್ತಾರೆ. ಸಿಹಿ ಅಡಿಗೆ ಮಾಡುವುದು ಸಂಪ್ರದಾಯ.( karjikai or kadubu).
ವಾಡಿಕೆ ಸಂಪ್ರದಾಯ ಇಲ್ಲದವರು ಜೋಡಿ ದೀಪವನ್ನ ತುಪ್ಪ, ಬತ್ತಿ ಹಾಕಿ ರೆಡಿ ಮಾಡಿ. ಒಂದು ತಟ್ಟೆಯಲ್ಲಿ “ಓಂ” ಹಾಗು ” ಶ್ರೀ” ಎಂದು ಗಂಧದಲ್ಲಿ ಆಗಲಿ , ಅರಿಶಿನದಲ್ಲಿ ಆಗಲಿ ಬರೆಯಬೇಕು. ಅಥವಾ ತಟ್ಟೆಯಲ್ಲಿ ಅಕ್ಕಿ ಯನ್ನು ಹಾಕಿ ಅದರಲ್ಲಿ “ಓಂ” ಹಾಗು ” ಶ್ರೀ” ಎಂದು ಬರೆಯಬೇಕು.
ಓಂ ಎಂದರೆ ಈಶ್ವರ, ಶ್ರೀ ಎಂದರೆ ಪಾರ್ವತಿ ಎಂದು ಅರ್ಥ.
“ಓಂ” ಮೇಲೆ ಒಂದು ದೀಪವನ್ನು, “ಶ್ರೀ” ಮೇಲೆ ಇನ್ನೊಂದು ದೀಪವನ್ನು ಇಟ್ಟು, ವಿಭೂತಿ , ಗಂಧ, ಅಕ್ಷತೆ, ಅರಿಶಿನ, ಕುಂಕುಮ ಎಲ್ಲವನ್ನು ದೀಪಕ್ಕೆ ಹಚ್ಚಿ, ಕಟ್ಟಿದ ಹೂವನ್ನು ಹಾಕಿ, ಗೆಜ್ಜೆ ವಸ್ತ್ರ ಹಾಗು ಅಂಗದಾರ ಹಾಕಿ ಪೂಜೆ ಮಾಡಿ. ಕಡ್ಡಿ, ಕರ್ಪೂರ, ತುಪ್ಪದ ಬತ್ತಿ ಇಂದ ಪೂಜಿಸಿ, ಮಂಗಳಾರತಿ ಯನ್ನು ಮಾಡಿ. ಹಣ್ಣು ಕಾಯಿ, ಎಳೆ, ಅಡಿಕೆ, ದಕ್ಷಿಣೆ ಇಟ್ಟು ನೈವೇದ್ಯ ಮಾಡಿ. ಹೂವು ಅಕ್ಷತೆ ಕೈಯಲ್ಲಿ ಹಿಡಿದು 5 ಸುತ್ತು ಸುತ್ತಿ ಅಡ್ಡ ನಮಸ್ಕಾರವನ್ನು ಮಾಡಿ, ಕೈಯಲ್ಲಿ ಇರುವ ಅಕ್ಷತೆ ಹೂವನ್ನು ಶಿವ ಪಾರ್ವತಿಗೆ ಸಮರ್ಪಿಸಿ, ಮುತೈಯ್ದೆ ಭಾಗ್ಯ ಅಷ್ಟಐಶ್ವರ್ಯ ಕೊಟ್ಟು ನಮ್ಮ ಸಂಸಾರವನ್ನು ಕಾಪಾಡು ಎಂದು ಬೇಡಿಕೊಳ್ಳಬೇಕು.
ನಂತರ ಮನೆಯೆಲ್ಲಿ ದೊಡ್ಡವರಿದ್ದರೆ ಅವರಿಗೂ ನಮಸ್ಕಾರ ಮಾಡಿ ಆಶೀರ್ವಾದ ತೆಗೆದು ಕೊಳ್ಳಬೇಕು.
ನಂತರ ಗಂಡನ ಕೈಯಲ್ಲಿ ಅಕ್ಷತೆ ಯನ್ನು ಕೊಟ್ಟು, ನಮಸ್ಕಾರ ಮಾಡಿ ಆಶೀರ್ವಾದ ಪಡೆಯಬೇಕು. ಕೆಲವರು ಹಣೆಗೆ ಕುಂಕುಮವನ್ನು ಇಡಿಸಿಕೊಳ್ಳುತ್ತಾರೆ. ಭೀಮನಷ್ಟೇ ಬಲ, ಪರಾಕ್ರಮ, ಕೊಡಲಿ ಎಂದು ಆ ಶಿವ ಪಾರ್ವತಿಯನ್ನು ಬೇಡಿಕೊಳ್ಳುತ್ತಾರೆ, ಇದೆ ಭೀಮನ ಅಮಾವಾಸ್ಯ.
ಭೀಮನ ಅಮಾವಾಸ್ಯ ಇಂದಲೇ ಎಲ್ಲ ಹಬ್ಬ ಹರಿ ದಿನಗಳು ಶುರುವಾಗುವುದು. ಮೊದಲಿಗೆ ಬರುವುದೇ ಭೀಮನ ಅಮಾವಾಸ್ಯೆ , ನಂತರ ಮಂಗಳ ಗೌರಿ, ಸಂಪತ್ತು ಶುಕ್ರವಾರಗಳು, ವರಮಹಾಲಕ್ಷ್ಮಿ ಹಬ್ಬ, ಗಾಳಿ ಪಟ ಹಬ್ಬ,ತುಳಸಿ ಹಬ್ಬ, ಗೌರಿ ಗಣೇಶ ಹಬ್ಬ ಇನ್ನು ಮುಂತಾದ ಹಬ್ಬಗಳು ಬಾಲಂಗೋಸಿ ತರಹ ಒಂದಾದ ನಂತರ ಒಂದೊಂದಾಗಿ ಬರುತ್ತವೆ.